ಎರಡು ಹನಿಯ ಕಥೆಗಳು

ಬೆಳಕು ಮತ್ತು ಕತ್ತಲೆ

ಬೆಳಕಿನ ಕುಡಿಯೊಂದು ಕಾಡನ್ನು ಸೀಳಿಕೊಂಡು ಮುನ್ನಡೆಯುತ್ತಿತ್ತು. ದಟ್ಟವಾದ ಕಾಡು, ಎಲ್ಲೆಲ್ಲೂ ಹಸಿರು. ಬೇಸಗೆಯಾಗಿದ್ದರೂ ಹಸಿರಿಗೆ ಕೊರತೆಯಿರಲಿಲ್ಲ. ಕೆಲವೆಡೆಯಂತೂ ಸೂರ್‍ಯನ ಬೆಳಕೇ ಬೀಳದಷ್ಟು ಕತ್ತಲೆ.
ಈ ಬೆಳಕಿನ ಕುಡಿಗೆ ಕಾಡೇನೂ ಹೊಸದಲ್ಲ. ಸಂಜೆಯಾಗುತ್ತಿದ್ದ ಸಮಯ. ನಿಂತ ಮರವೂ ನಿಂತಲ್ಲೇ ವಿಶ್ರಮಿಸಿಕೊಳ್ಳುವಂಥ ಕಾಲ. ತನ್ನೊಳಗೆ ಕಟ್ಟಿದ ಗೂಡುಗಳಲ್ಲಿ ಕಲರವ ಕೇಳುವ ಸಂಭ್ರಮದಲ್ಲಿ ಮುಳುಗುತ್ತಿತ್ತು. ಈ ಕುಡಿ ನಡೆದು ನಡೆದು ದಣಿವಾದಂತೆನಿಸಿತು. ಅಷ್ಟರಲ್ಲಿ ಒಂದು ಮಿಣುಕು ಹುಳು ಎದುರಾಯಿತು. ಕುಡಿಗೆ ಅಚ್ಚರಿ. ನನ್ನ ಹಾಗೆಯೇ ಇದ್ದೀ. ಆಗಾಗ ಹೊಳೆಯುತ್ತೀ, ನೀನ್ಯಾರು ಎಂದಿತು.
ಅದಕ್ಕೆ ಮಿಣುಕು ಹುಳು ಮಾತನಾಡಲಿಲ್ಲ. ಪಕ್ಕದಲ್ಲಿದ್ದ ಮರವೊಂದು “ನೋಡು, ಅದು ನಮ್ಮ ಕಂದೀಲು’ ಎಂದಿತು. ಬೆಳಕಿನ ಕುಡಿಗೆ ಇನ್ನೂ ಆಶ್ಚರ್ಯ. “ನಿಮ್ಮ ಕಂದೀಲಾದರೆ ನಿರಂತರವೂ ಉರಿಯುವುದಿಲ್ಲವೇಕೆ?’ ಎಂದು ಪ್ರಶ್ನಿಸಿತು. ಅದಕ್ಕೆ ಮರವೂ ಸಹ “ನಮಗೆ ಸದಾ ಉರಿಯುವ ಕಂದೀಲಿನ ಅಗತ್ಯವಿಲ್ಲ. ನಮಗೆ ಕತ್ತಲೆ ಇಷ್ಟ. ನಮಗೆ ಒಂದು ಹಿಡಿ ಬೆಳಕು ಸಾಕು. ಅದು ಈ  ಹುಳು ನೀಡಬಲ್ಲದು’ ಎಂದಿತಂತೆ.
ಈ ಮಾತು ಕೇಳಿದ ಮೇಲಂತೂ ಬೆಳಕಿನ ಕುಡಿಗೆ ಇನ್ನೂ ದಣಿವು ಹೆಚ್ಚಾಯಿತು. ಅಲ್ಲೇ ಅದೇ ಮರದ ಬುಡದಲ್ಲಿ ಒರಗಿತಂತೆ. ಕೆಲವೇ ಕ್ಷಣದಲ್ಲಿ ಅದನ್ನೂ ಕತ್ತಲೆ ಬಿಡಲಿಲ್ಲ ; ವ್ಯಾಪಿಸಿಕೊಂಡು ಬಿಟ್ಟಿತು.

ಅವರ ಅಳು ತೋರದು
ಕಾಡಿನಲ್ಲೊಂದು ದೊಡ್ಡ ಮರ ದಿಟ್ಟವಾಗಿ ನಿಂತಿತ್ತು. ನೋಡಿದರೆ ದಢೂತಿ ಆಸಾಮಿ ನಿಂತ ಹಾಗೆ. ಯಾರು ಬಂದರೂ ಅದನ್ನು ಕಂಡು ಹೆದರದೇ ಇರುತ್ತಿರಲಿಲ್ಲ. ಆದರೆ ಆ ಸಂಜೆ ಮಾತ್ರ ಅದು ಅಳುತ್ತಿತ್ತು.
“ಏನು ? ಯಾರೋ ಅತ್ತ ಸದಲ್ಲವೇ? ’ ಎಂದು ಸುತ್ತಲೂ ಕಣ್ಣರಳಿಸಿ “ಯಾರು ಅಳುತ್ತಿರುವುದು?’ ಎಂದು ಪ್ರಶ್ನೆ ಹಾಕಿತಂತೆ ಸಣ್ಣ ಮರ. ಅದಕ್ಕೆ “ಬಹಳ ಬೇಸರವಾಗಿದೆ, ಅದಕ್ಕೇ ಅತ್ತು ಹಗರಾಗುತ್ತಿದ್ದೇನೆ?’ ಎಂದಿತಂತೆ ದೊಡ್ಡ ಮರ. “ನಾವೂ ಅಳಬಹುದೇ? ಅಳಲು ಬರುತ್ತದೆಯೇ?’ ಎಂಬುದು ಸಣ್ಣ ಮರದ ಮುಂದಿನ ಪ್ರಶ್ನೆ.
“ಯಾಕೆ ? ನಮಗೆ ದುಃಖವಾಗುವುದಿಲ್ಲವೇ? ಅತ್ತರೇನು ತಪ್ಪು?’ ಎಂದು ಹೇಳಿದ್ದು ದೊಡ್ಡಮರ. ಅದರಿಂದ ವಿಚಿತ್ರ ಗೊಂದಲಕ್ಕೀಡಾದ ಸಣ್ಣ ಮರ, “ಅವರು ಅಳುವಾಗ ಕಣ್ಣಲ್ಲಿ ದಳದಳನೆ ನೀರು ಹರಿಯುತ್ತದೆ. ನಮಗೇಕಾಗುವುದಿಲ್ಲ ? ಎಂದು ಕೇಳಿತಂತೆ. ದೊಡ್ಡ ಮರ ಒಂದು ನಿಟ್ಟುಸಿರು ಬಿಟ್ಟು, “ನಾವೂ ಅಳುತ್ತೇವೆ. ನಮ್ಮ ಕಣ್ಣಲ್ಲೂ ನೀರು ಬರುತ್ತದೆ. ಆದರೆ ಅವರಿಗದು ತೋರದು’ ಎಂದು ಹೇಳಿದಾಗ ಸಣ್ಣಮರದ ಕಣ್ಣಲ್ಲೂ ನೀರು ಬಂದು ನಿಂತಿತು ; ಹರಿಯಲಿಲ್ಲ !

ಪತ್ರಿಕೆಯ ಸುದ್ದಿ ಮೂಲಗಳು- ಸಂವಾದ 1

ಭಾಗ ೧
ಸಂವಾದ ಆರಂಭವಾಗಿದೆ. ನಮ್ಮ ಭಾಗದಲ್ಲಿ ಮೊದಲ ಹಂತದ ಚುನಾವಣೆ ಇದ್ದದ್ದರಿಂದ ಹಲವರ ಪ್ರಶ್ನೆಗಳಿಗೆ ಉತ್ತರಿಸಲು ತಡವಾಯಿತು. ಇನ್ನು ತಡವಾಗುವುದಿಲ್ಲ.

ಶೆಟ್ಟರ ಮೊದಲ ಪ್ರಶ್ನೆ
ಸುದ್ದಿ ಮೂಲ ಹೇಗೆ ಹುಡುಕುತ್ತೀರಿ ? ಮತ್ತು ಅದರ ಸತ್ಯಾಸತ್ಯತೆಗಳನ್ನು ಹೇಗೆ ಶೋಧಿಸುತ್ತೀರಿ ?
ಉತ್ತರ : ಪ್ರತಿ ವರದಿಗಾರನಿಗೂ ಬೀಟ್ ಎಂದು ಇರುವುದು ಸಾಮಾನ್ಯ ; ಪೊಲೀಸರಿಗೆ ಇದ್ದ ಹಾಗೆಯೇ. ದಿನ ಪತ್ರಿಕೆಯ ಕೆಲಸಕ್ಕೂ, ವಾರಪತ್ರಿಕೆ ಇತ್ಯಾದಿಗೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಸುದ್ದಿ ಪೈಪೋಟಿಯ ಹಿನ್ನೆಲೆಯಲ್ಲಿ ವರದಿಗಾರರ ದಿನಚರಿಯೇ ಬದಲಾಗಿ ಹೋಗಿದೆ.
ಬಹಳ ಪ್ರಮುಖ ವಿಷಯಗಳನ್ನು ಆಧರಿಸಿ ಬೀಟ್ ಎಂದು ಹಂಚಲಾಗುತ್ತದೆ. ಉದಾಹರಣೆಗೆ ಅಪರಾಧ ವಿಭಾಗವನ್ನು ಒಬ್ಬ ನೋಡಿಕೊಂಡರೆ, ಮತ್ತೊಬ್ಬನಿಗೆ ರಾಜಕೀಯ ಬೆಳವಣಿಗೆಗಳ ನಿರ್ವಹಣೆ, ಶಿಕ್ಷಣ, ಆರೋಗ್ಯ- ಹೀಗೆ ಹಂಚಲಾಗುತ್ತದೆ. ಈ ಕ್ಷೇತ್ರಗಳಲ್ಲಿ ಆಗುವ ಬೆಳವಣಿಗೆಗಳ ಮೇಲೆ ನಿಗಾ ಇಟ್ಟು ವರದಿ ಮಾಡಬೇಕು. ಬೇರೆ ಪೇಪರ್‍ನಲ್ಲಿ ಸುದ್ದಿ ಬಂದರೆ ಅದು ನಮಗೆ ಮಿಸ್ ಆದಂತೆ. ಅದಕ್ಕೆ ನಾವು ಉತ್ತರಿಸಬೇಕು.
ಹೀಗೆ ಆಯಾ ವರದಿಗಾರರು ತಮಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸುದ್ದಿ ಮೂಲಗಳನ್ನು ಹುಡುಕಿಕೊಳ್ಳುತ್ತಾರೆ. ಸಾಮಾನ್ಯವಾಗಿ ಪ್ರತಿ ವರದಿಗಾರರು ಹಲವು ವಲಯಗಳಲ್ಲಿ ಸುದ್ದಿ ಮೂಲಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಇಲ್ಲಿ ಯಾರನ್ನೂ ಉಪೇಕ್ಷಿಸುವಂತಿಲ್ಲ. ಗುಮಾಸ್ತನಿಂದ ಹಿಡಿದು ಉನ್ನತ ಅಧಿಕಾರಿವರೆಗೂ ವಿವಿಧ ಹಂತಗಳ ಸುದ್ದಿಮೂಲಗಳು.
ಸುದ್ದಿಯ ವಾಸನೆ ಸಿಗುವುದು ಕೆಳ ಹಂತದ ಅಧಿಕಾರಿಗಳಿಂದ. ಅದು ಕನ್‌ಫರ್ಮ್ ಆಗುವುದು ಉನ್ನತ ಅಧಿಕಾರಿಗಳಿಂದ. ಆದ್ದರಿಂದ ನಮ್ಮ ಸುದ್ದಿ ಮೂಲಗಳನ್ನು ಚೆನ್ನಾಗಿ (ಅಂದರೆ ತಿಂಡಿ ಕೊಡಿಸಿ, ಹಣ ಕೊಡಿಸಿಯಲ್ಲ) ವಿಶ್ವಾಸದಿಂದ ಇಟ್ಟುಕೊಳ್ಳಬೇಕು. ಇದು ಬರಿಯ ಅಧಿಕಾರಿಗಳೆಂದೇ ಅಲ್ಲ. ಸುದ್ದಿ ಮೂಲಗಳು ಪ್ರತಿ ವಿಷಯಕ್ಕೂ ಸಂಬಂಧಿಸಿ ಬದಲಾಗುತ್ತಾ ಹೋಗುತ್ತದೆ.
ಎರಡನೆಯದಾಗಿ ನಮ್ಮ ಸುದ್ದಿ ಮೂಲಗಳ ಸತ್ಯಾಸತ್ಯತೆಗಳನ್ನು ಶೋಧಿಸುವ ಬಗೆ. ಇದು ಸಂಪೂರ್ಣ ವಿಶ್ವಾಸದ ನೆಲೆಯಲ್ಲಿ ನಡೆಯುವಂಥದ್ದು. ನಾವೂ ಸಹ ಕೊಟ್ಟದ್ದನ್ನೆಲ್ಲಾ ಸುದ್ದಿಗಳೆಂದು ಬರೆಯುವುದಿಲ್ಲ. ಅದನ್ನು ಬೆನ್ನು ಹತ್ತಿ ಅದರ ವಿವಿಧ ನೆಲೆಗಳನ್ನು ಶೋಧಿಸುತ್ತೇವೆ. ನಂತರ ನಮಗೆ ವಿಶ್ವಾಸ ಮೂಡಿದ್ದಲ್ಲಿ ಮಾತ್ರ ನಮ್ಮ ಮುಖ್ಯ ವರದಿಗಾರರಿಗೆ, ಸಂಪಾದಕರಿಗೆ ಇಂಥದೊಂದು ಸುದ್ದಿಯಿದೆ ಎಂಬ ಗುಟ್ಟು ಬಿಟ್ಟುಕೊಡುತ್ತೇವೆ. ಅಲ್ಲಿಯವರೆಗೆ ಆ ಕುರಿತು ಏನನ್ನೂ ಹೇಳುವುದಿಲ್ಲ. “ಕ್ರಾಸ್ ಚೆಕ್’ ಎಂಬುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದರೆ ತಪ್ಪೇನೂ ಇಲ್ಲ. ಅದಿಲ್ಲದೇ ನಾವು ಮುಂದುವರಿಯುವುದಿಲ್ಲ. ಕೆಲವೊಮ್ಮೆ ಇಷ್ಟೆಲ್ಲಾ ಆದ ಮೇಲೂ ಎಡವಿದ್ದು ಇದೆ ; ಅದು ಸಾಮಾನ್ಯ.

ಗಣೇಶ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದನ್ನು ಒಂದೊಂದಾಗಿಯೇ ಉತ್ತರಿಸುತ್ತೇನೆ
ಮೊದಲನೆಯದಾಗಿ ಪತ್ರಿಕೆಗೆ ಸುದ್ದಿ ಹೇಗೆ ಬರುತ್ತದೆ ?
ಪತ್ರಿಕೆಗೆ ಸುದ್ದಿ ಬರುವ ಮೂಲಗಳು ಹಲವಾರು. ಹಿಂದೆ ದಿಕ್ಕುಗಳೆಂದು ನಂಬಿಕೆಯಿತ್ತು. ಈಗ ಹಾಗಲ್ಲ. ಜತೆಗೆ ಸುದ್ದಿ ಏಜೆನ್ಸಿಗಳು, ಪತ್ರಿಕೆಗಳೇ ರೂಪಿಸಿಕೊಂಡ ಸಂಪರ್ಕ ಜಾಲಗಳೆಲ್ಲಾ ಸುದ್ದಿ ತಂದು ಸುದ್ದಿಮನೆಗೆ ಸುರಿಯುತ್ತವೆ. ಅದನ್ನು ಹೆಕ್ಕಿ ಒಪ್ಪ ಓರಣ ಮಾಡಿ ಬೆಳಗ್ಗೆ ಓದುವಂತೆ ಮಾಡುವ ಹೊಣೆ ಸಂಪಾದಕರು, ಉಪ ಸಂಪಾದಕರು, ಸುದ್ದಿ ಸಂಪಾದಕರು-ಹೀಗೆ ಹಲವು ಹಂತಗಳಲ್ಲಿ ನಡೆಯುತ್ತದೆ. ಒಮ್ಮೊಮ್ಮೆ ಅನ್ನಿಸುವುದಿದೆ. ಕಸದಂತೆಯೇ ಸುದ್ದಿ ಬಂದು ಸುರಿಯುತ್ತದಲ್ಲಾ ಎಂದು. ಆದರೆ ಕೆಲವೊಮ್ಮೆ ಹೆಕ್ಕುವ ಸಂದರ್ಭದಲ್ಲಿ ಅದಲು ಬದಲಾಗುವುದುಂಟು.

ಸುಪ್ರೀತ್ ಕೇಳಿದ ಪ್ರಶ್ನೆಯೂ ಇದೇ ತೆರನಾದದ್ದು
ಪತ್ರಿಕೆಗೆ ಸುದ್ದಿ ಮೂಲಗಳು ಹಲವಾರು. ಪ್ರಸ್ತುತ ಬಹುತೇಕ ಪತ್ರಿಕೆಗಳು ದೇಶ-ವಿದೇಶ ಸುದ್ದಿಗಳಿಗಾಗಿ ಯುಎನ್‌ಐ, ಪಿಟಿಐ ನ್ಯೂಸ್ ಏಜೆನ್ಸಿಯನ್ನು ಆಶ್ರಯಿಸಿದ್ದೇವೆ. ಇದಲ್ಲದೇ ರಾಯಿಟರ್ ಮುಂತಾದವೂ ಇವೆ. ಕನ್ನಡದಲ್ಲಿ ಕರ್ನಾಟಕ ನ್ಯೂಸ್ ನೆಟ್ ಸುದ್ದಿ ಜಾಲವಿದೆ. ಇದಲ್ಲದೇ ಪ್ರತಿ ಪತ್ರಿಕೆಯೂ ಜಿಲ್ಲಾ, ತಾಲೂಕು ಮಟ್ಟದಲ್ಲಿ ತಮ್ಮ ವರದಿಗಾರರನ್ನು ನೇಮಿಸಿಕೊಂಡಿರುತ್ತದೆ. ತಾಲೂಕು ಮಟ್ಟದಲ್ಲಿ ಇರುವವರನ್ನು ಬಿಡಿ ಸುದ್ದಿ ಸಂಗ್ರಾಹಕರು (ಸ್ಟ್ರಿಂಜರ್) ಎಂದು ಕರೆಯಲಾಗುವುದು. ಪ್ರತಿ ಊರಿನಲ್ಲೂ ಆಯಾ ಪತ್ರಿಕೆ ಇರುವ ಪ್ರಸಾರ ಸಂಖ್ಯೆ ಹಾಗೂ ಹುಟ್ಟುವ ಸುದ್ದಿಗಳ ಸಂಖ್ಯೆ ಆಧರಿಸಿ ಸುದ್ದಿ ಸಂಗ್ರಾಹಕರನ್ನು ನೇಮಿಸಿಕೊಳ್ಳಲಾಗುವುದು. ಉಳಿದಂತೆ ಜಿಲ್ಲಾ ವರದಿಗಾರರನ್ನು ಪತ್ರಿಕೆಯೇ ನೇಮಿಸಿಕೊಂಡಿರುತ್ತದೆ. ಇಷ್ಟೆಲ್ಲಾ ಆದ ಮೇಲೆ ಅನಧಿಕೃತ ಸುದ್ದಿ ಮೂಲಗಳೆಂದು ಇಲ್ಲ. ಸುದ್ದಿ ಮೂಲ ಹೆಚ್ಚು ಬಾರಿ ತೆರೆಯ ಹಿಂದೆಯೇ ಇರುತ್ತದೆ.
ಟ್ಯಾಬ್ಲಾಯ್ ಪತ್ರಿಕೆಗೂ ದಿನಪತ್ರಿಕೆಗೂ ಬಹಳ ವ್ಯತ್ಯಾಸವಿದೆ. ಕಾರ್‍ಯಶೈಲಿಯೇ ಸಂಪೂರ್ಣ ಭಿನ್ನ. ನಮ್ಮ ಸುದ್ದಿಯ ಆದ್ಯತೆಗೂ, ಅವರ ಸುದ್ದಿಯ ಆದ್ಯತೆಗೂ ವ್ಯತ್ಯಾಸವಿದೆ. ಟ್ಯಾಬ್ಲಾಯ್ಡ್ ಅವರಿಗೆ ಪ್ರತಿ ವಾರವೂ ತಮ್ಮ ಪತ್ರಿಕೆ ಖಾಲಿಯಾಗಲು “ಸುದ್ದಿ ಸ್ಫೋಟ’ (ಬ್ರೇಕಿಂಗ್ ನ್ಯೂಸ್) ಅನಿವಾರ್ಯವಾಗಿರುತ್ತದೆ. ಆದರೆ ಅಂಥದೊಂದು ಅನಿವಾರ್ಯ ದಿನಪತ್ರಿಕೆಗಳಿಗಿಲ್ಲ !

ಸಂಬಂಧಗಳ ಸೊಗಸಾದ ಪೋಟ್ರೈಟ್ !

ಮ್ಯಾಜಿಕ್ ಕಾರ್ಪೆಟ್‌ನಲ್ಲಿ ಸುಪ್ರೀತ್ ಚಿಲ್ಡ್ರನ್ ಆಫ್ ಹೆವನ್ (ಮಜಿದ್ ಮಜ್ದಿ) ಚಿತ್ರದ ಬಗ್ಗೆ ಹೇಳಿದ್ದಾರೆ. ನನ್ನ ಭಾವಕೋಶದೊಳಗೆ ತೀರಾ ಕಾಡಿದ ಚಿತ್ರವದು. ಯಾಕೋ, ನನಗೆ ಸ್ವಲ್ಪ ಇರಾನಿ ಚಿತ್ರಗಳೆಂದರೆ ಇಷ್ಟ. ಅದಕ್ಕೆ ಕಾರಣ ಹಲವಿವೆ. ಈ ಹಿಂದೆಯೂ ಒಂದು ಇರಾನಿ (ಸೈಲೆನ್ಸ್) ಚಿತ್ರದ ಬಗ್ಗೆಯೇ ಬರೆದಿದ್ದೆ.  ಇತ್ತೀಚೆಗೆ ನನ್ನನ್ನು ತೀರಾ ಬಾಧಿಸಿದ ಚಿತ್ರವದು.

ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಈ ಚಿತ್ರವನ್ನು ನೋಡಿದ್ದೆ. ದೊಡ್ಡ ಸ್ಕ್ರೀನ್‌ನಲ್ಲಿ ನೋಡಿದಾಗ ಗಂಟಲು ಗದ್ಗದಿತವಾಗಿತ್ತು. ಅಳು ತುಟಿಗೆ ಬಂದು ನಿಂತಿತ್ತು !

ವಾಸ್ತವವಾಗಿ ಅಂದಿನಿಂದ ಇರಾನಿ ಚಿತ್ರದ ಬಗೆಗೆ ಬೆರಗು ಬೆಳೆಸಿಕೊಂಡದ್ದು. ಮಜಿದ್ ಮಜ್ದಿಯ ಎಲ್ಲ ಚಿತ್ರಗಳನ್ನು ನೋಡುವ ಶಪಥ ತೊಟ್ಟು ಬಹುಪಾಲನ್ನು ಮುಗಿಸಿದ್ದೇನೆ. ಇನ್ನೂ ನೋಡುವುದಿದೆ. ಮೊನ್ನೆ ಗೆಳತಿಯೊಬ್ಬಳೊಂದಿಗೆ ಇದೇ ವಿಷಯವಾಗಿ ಮತ್ತು ಇದೇ ಚಿತ್ರದ ಬಗ್ಗೆ ಹರಟುತ್ತಿದ್ದೆ.

ನಮ್ಮ ಕನ್ನಡ ಚಿತ್ರಗಳಲ್ಲಿ ವಿಷಾದವನ್ನು ಕಟ್ಟಿಕೊಡಲು ಬರುವುದೇ ಇಲ್ಲ ಎನ್ನುವುದು ನನ್ನ ತಕರಾರು. ನನ್ನ ದೃಷ್ಟಿಯಲ್ಲಿ ಎಂದಿಗೂ ದುಃಖ ವಿಷಾದವಲ್ಲ. ಅಳುವುದು ವಿಷಾದಕ್ಕೆ ಸಮನಲ್ಲ. ವಿಷಾದ ನಮ್ಮನ್ನು ಗಂಟಲು ಉಬ್ಬಿಸುವಂಥ ಸ್ಥಿತಿ. ಅಳು ಬಂದು ಧಾರೆಯಾಗಿ ಇಳಿಯುವಂಥ ಸ್ಥಿತಿ ; ಇಳಿಯುವುದಿಲ್ಲ. ಮನದೊಳಗೆಲ್ಲಾ ಒಂದು ತೀರಾ ತಣ್ಣನೆಯ ಸ್ಪರ್ಶವನ್ನು ಕೊಟ್ಟು ವಿಷಣ್ಣನಾಗಿಸಿಬಿಡುವಂಥದ್ದು. ಬಹಳಷ್ಟು ಬಾರಿ ಅತ್ತು ಹಗುರಾಗುವ ಪ್ರಕ್ರಿಯೆ ನಮ್ಮ ವಿಷಾದದ ಸನ್ನಿವೇಶಗಳಲ್ಲಿ ನಡೆಯುತ್ತದೆ. ವಾಸ್ತವವಾಗಿ ಅದಲ್ಲ.

ನಮ್ಮಲ್ಲಿ ವಿಷಾದವೆಂದರೆ ಗೊಳೋ ಎಂದು ಅಳಿಸಿಬಿಡುತ್ತೇವೆ. ಗಿರೀಶ್ ಕಾಸರವಳ್ಳಿಯವರ “ದ್ವೀಪ’ದಲ್ಲೂ ಸ್ಥಳಾಂತರದ ಅನಿವಾರ್ಯದಿಂದ ಹುಟ್ಟಿದ ವಿಷಾದ ಮಳೆಯಂತೆಯೇ ಅಳುವಾಗಿ ಮಾರ್ಪಡುತ್ತದೆ. ಇವುಗಳನ್ನೆಲ್ಲಾ ಬ್ಯಾಕ್‌ಡ್ರಾಪ್‌ನಲ್ಲಿಟ್ಟುಕೊಂಡು ನೋಡಿದಾಗ “ಸ್ವರ್ಗದ ಮಕ್ಕಳು’ ಅದ್ಭುತ ಚಿತ್ರವೆನಿಸುತ್ತದೆ. ಇದುವರೆಗೆ ಇದನ್ನು ಎಂಟು ಬಾರಿ ನೋಡಿದ್ದೇನೆ. ನೋಡಿದಾಗಲೆಲ್ಲಾ ಮನಸ್ಸಿನೊಳಗೆ ಹೊಸ ಹುರುಪು ತುಂಬಿದೆ. ಸುಂದರ ಚಿತ್ರ ಬದುಕಿಗೆ ಭಾಷ್ಯ ಬರೆಯಬಲ್ಲದು ಎಂಬುದೊಂದು ಮಾತಿದೆ. ಅದರಂತೆಯೇ ಇದು ಭಾಷ್ಯ ಬರೆದ ಚಿತ್ರವೇ ಹೌದು.

ಕಳೆದ ಶಿವರಾತ್ರಿಯಂದು ಕೊಡಚಾದ್ರಿ ಬೆಟ್ಟದ ಮೇಲಿನ ಭಟ್ಟರ ಮನೆಯಲ್ಲಿ ನಾವೆಲ್ಲಾ ಒಂದಷ್ಟು ಮಂದಿ (ವಾದಿರಾಜ್, ಹರ್ಷ, ವಿಘ್ನೇಶ್, ಪ್ರವೀಣ್, ಚೈತನ್ಯ, ಸಿಂಚನ, ಸಿರಿ, ಲಕ್ಷ್ಮೀನಾರಾಯಣ, ಗಿರಿಧರ್, ಕಾರ್ತಿಕ್, ಮಹೇಂದ್ರ ಮತ್ತಿತರರು) ಇದೇ ಚಿತ್ರವನ್ನು ನೋಡಿದೆವು ; ಚರ್ಚಿಸಿದೆವು. ಒಂದು ಒಳ್ಳೆಯ ಸಂವಾದ. ಚೇತನಾರಿಗೂ ಈ ಚಿತ್ರ ನೋಡುವಂತೆ ಸಲಹೆ ನೀಡಿದ್ದೆ. ನನಗೆ ಇರಾನಿ ಚಿತ್ರ ಇಷ್ಟವಾಗುವ ಕಾರಣ ತಿಳಿಸುತ್ತೇನೆ. ಬಹುಶಃ ಅದೇ ಈ ಸ್ವರ್ಗದ ಮಕ್ಕಳ ಚಿತ್ರದ ಬಗೆಗಿನ ವ್ಯಾಖ್ಯಾನವಾಗಬಹುದೇನೋ? ಗೊತ್ತಿಲ್ಲ.

ಮನುಷ್ಯ ಸಂಬಂಧಗಳಲ್ಲಿನ ಸೂಕ್ಷ್ಮತೆ, ನಾಜೂಕುತನವನ್ನು ಇರಾನಿ ನಿರ್ದೇಶಕರು ಅತ್ಯಂತ ನಯವಾಗಿ, ಸೊಗಸಾಗಿ ಕಟ್ಟಿಕೊಡಬಲ್ಲರು. ಅದರಲ್ಲೂ ಮಕ್ಕಳ ಮುಗ್ಧ ಭಾವನೆಗಳಲ್ಲಿನ ಹೂಗಳಂಥ ಕೋಮಲತೆಯನ್ನು ಹಾಗೆಯೇ ತಾಜಾ ತಾಜಾ ಆಗಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಈ ಚಿತ್ರದಲ್ಲಿ ಎಲ್ಲೆಲ್ಲೂ ಕಾಣುವುದು ಅಷ್ಟೇ, ಮನುಷ್ಯ ಸಂಬಂಧಗಳ ನಿರ್ವಹಣೆ. ಅದ್ರಲ್ಲೂ ನಿರ್ದೇಶಕ ತೋರಿದ ನಾಜೂಕುತನ. ಇದನ್ನು ಪುಷ್ಟೀಕರಿಸುವಂಥ ಎಷ್ಟೊಂದು ದೃಶ್ಯಗಳು ಬೇಕು ಆ ಚಿತ್ರದಲ್ಲಿ. ಪ್ರತಿ ಕ್ಷಣದಲ್ಲೂ ಆ ಕಾಳಜಿಯೇ ಇಡೀ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ಅಂಥ ಕೆಲವು ಸನ್ನಿವೇಶಗಳನ್ನು ಹೇಳುತ್ತೇನೆ. ಇಲ್ಲಿ ಜಹ್ರಾ ಎಂದರೆ ಶುಭ್ರ, ಹೂವ ಎಂದೆಲ್ಲಾ ಅರ್ಥವಿದೆ. ಇವು ಸ್ವರ್ಗದ ಹೂವುಗಳೇ !
 
ಮೊದಲಿಗೆ ಅಲಿ (ಅಣ್ಣ)ಯ ಮನೆಯಲ್ಲಿ ಟೀ ಗೆ ಸಕ್ಕರೆ ಇರೋದಿಲ್ಲ. ಅವನಪ್ಪ ಮಸೀದಿಯಲ್ಲಿ ಟೀ ಸರಬರಾಜು ಮಾಡುವವ. ಅದಕ್ಕೆ ಮನೆಯಲ್ಲಿ ಕುಳಿತು ಸಕ್ಕರೆ ಪುಡಿ ಮಾಡುತ್ತಿರುತ್ತಾನೆ. ಆಗ ಅಲಿಯ ತಂಗಿ ಜಹ್ರಾ, ಈ ಸಕ್ಕರೆ ಇದೆಯಲ್ಲಾ ಎಂದು ಅಪ್ಪನಿಗೆ ಕೇಳುತ್ತಾಳೆ. ಆಗ ಅಪ್ಪ “ಇದು ಮಸೀದಿಯದ್ದು, ಹಾಗೆ ಬಳಸುವಂತಿಲ್ಲ’ ಎಂದು ಹೇಳುತ್ತಾನೆ. ಇದು ಪವಿತ್ರತೆ ಇತ್ಯಾದಿಗಿಂತಲೂ ಪ್ರಾಮಾಣಿಕತೆಯನ್ನು ಅನಾವರಣಗೊಳಿಸುವ ಸನ್ನಿವೇಶ.

ಎರಡನೇ ಸನ್ನಿವೇಶದಲ್ಲಿ ತಾನು ಕಳೆದುಕೊಂಡ ಷೂ ತನ್ನ ಸಹಪಾಠಿಯೊಬ್ಬಳಲ್ಲಿ ಇದೆ ಎಂದು ಜಹ್ರಾಳಿಗೆ ತಿಳಿಯುತ್ತದೆ. ಜಹ್ರಾಳಲ್ಲಿ ಒಂದು ಬಗೆಯ ಸಿಟ್ಟು ಬರಿಸಿರುತ್ತೆ. ಆದರೆ ಒಮ್ಮೆ ಅಣ್ಣ ತಂದುಕೊಟ್ಟ ಮುದ್ದಿನ ಪೆನ್ನನ್ನು ಜಹ್ರಾ ತರುವಾಗ ರಸ್ತೆಯಲ್ಲಿ ಬೀಳಿಸಿಕೊಂಡು ಬಿಟ್ಟಿರುತ್ತಾಳೆ. ಅವಳ ಹಿಂದೆಯೇ ಬರುವ ಅವಳ ಸಹಪಾಠಿ ಹುಡುಗಿ ಅದನ್ನು ಎತ್ತಿಕೊಂಡು ಮರುದಿನ ಅವಳಿಗೆ ನೀಡುತ್ತಾಳೆ. ಆಗ ಜಹ್ರಾ ಅವಳನ್ನು ವಿಶ್ವಾಸದಿಂದ ನೋಡುವ ಬಗೆಯೇ ಅನನ್ಯ. ಇದೊಂದು ದೃಶ್ಯದಲ್ಲಿ ಇಬ್ಬರೊಳಗೂ ಕ್ಷೀಣಿಸಬಹುದಾದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾನೆ. ಅಂದಿನಿಂದ ಅವಳ ಬಗ್ಗೆ ಜಹ್ರಾ ಏನೂ ಅಂದುಕೊಳ್ಳುವುದಿಲ್ಲ.

ಇಂಥದ್ದೇ ಇನ್ನೊಂದು ಸನ್ನಿವೇಶ ಹೇಳುತ್ತೇನೆ. ಅಲಿ ಚೆನ್ನಾಗಿ ಅಂಕ ಗಳಿಸಿದ್ದಕ್ಕೆ ಅವನ ಮೇಸ್ಟ್ರು ಒಂದು ಚೆನ್ನಾದ ಪೆನ್ನನ್ನು ಉಡುಗೊರೆಯಾಗಿ ಕೊಟ್ಟಿರುತ್ತಾರೆ. ಶಾಲೆಯಿಂದ ಬರುವಾಗ ಪಕ್ಕದ ಮನೆಗೆ ಹೋಗ್ತಾ ಇದ್ದ ಜಹ್ರಾ ಸಿಗುತ್ತಾಳೆ ರಸ್ತೆಯಲ್ಲಿ. ಅಲಿ, ತಗೊಳೆ ತಂಗಿ ಈ ಪೆನ್ನು ನಿನಗೆ ಎಂದು ತನ್ನ ಹೊಸ ಪೆನ್ನನ್ನು ಕೊಡುತ್ತಾನೆ. ಆಕೆಗೆ ನಂಬಿಕೆ ಬರುವುದಿಲ್ಲ. ಆ ಪೆನ್ನನ್ನು ಕೈಯಲ್ಲಿಟ್ಟುಕೊಂಡು ನೋಡಿ “ಚೆನ್ನಾಗಿದೆಯಲ್ಲೋ’ ಎನ್ನುತ್ತಾಳೆ. ಆಗ ಅಣ್ಣ ಅಲಿ “ಅದು ನಿನಗೇ’ ಎಂದಾಗ ಅಚ್ಚರಿ ಮತ್ತು ಆನಂದದಿಂದ “ನನಗಾ, ನನ್ನನನ್ಗಾ’ ಎಂದು ಕೇಳುತ್ತಾಳೆ. ಆಗ ಅಲಿ, “ಹೌದೇ, ನಿನಗೇ’ ಎಂದಾಗ ಅವಳ ಮುಖದಲ್ಲಿ ನಗೆ ನದಿಯಲ್ಲಿ ಚಿಕ್ಕದೊಂದು ಗಾಳಿ ಹೊರಡಿಸುವ ತರಂಗದಂತೆ ಅರಳುತ್ತದೆ. ಜತೆಗೆ, “ಅಣ್ಣಾ, ನಾನು ಅಪ್ಪನ ಬಳಿ (ಷೂ ಕಳೆದದ್ದನ್ನು) ಹೇಳುವುದಿಲ್ಲ’ ಎಂದು ಹೇಳುತ್ತಾಳೆ. ಆಗ ಅಣ್ಣ ಹೇಳುವ ವಿಶ್ವಾಸದ ಮಾತು “ನನಗೆ ಗೊತ್ತು ಕಣೆ. ನೀನು ಹಾಗೆ ಹೇಳುವುದಿಲ್ಲ’ ಎಂದು ಹೇಳಿ ಮನೆಗೆ ಹೋಗುತ್ತಾನೆ. ಇದು ಸಂಬಂಧಗಳ ನಿರ್ವಹಣೆ.

ಅಪ್ಪನೊಂದಿಗೆ ಹೊಸ ಕೆಲಸ ಹುಡುಕಿಕೊಂಡು ಬಂದವನಿಗೆ ಕೆಲಸ ಸಿಗುವುದು ಅಂಥದೊಂದು ಸಂಬಂಧದ ಎಳೆಯಿಂದಲೇ. ಅಪ್ಪ-ಅಮ್ಮನಿಲ್ಲದೇ ಅಜ್ಜನೊಂದಿಗೆ ಬದುಕುವ ತಬ್ಬಲಿ ಮಗು ಮತ್ತು ಇವನೊಡನೆ ಸಂಬಂಧ ಬೆಳೆಯುವಂಥದ್ದು.”ನಿಮ್ಮ ಮನೆ ತೋಟದಲ್ಲಿ ಕೆಲಸವಿದೆಯೇ?’ ಎಂದು ಕೇಳುವಾಗ ಅತ್ತಲಿಂದ ಬಾಗಿಲ ಒಳಗಿಂಡಿಯಿಂದಲೇ ಆ ಮಗು “ನೀನ್ಯಾರು, ನಿನ್ನ ಹೆಸರೇನು, ಎಷ್ಟನೇ ಕ್ಲಾಸು’ ಹೀಗೆಲ್ಲಾ ಕೇಳಿ ಪರಿಚಯಿಸಿಕೊಳ್ಳುತ್ತದೆ. ನಂತರ ಅಪ್ಪ ಕೆಲಸ ಮಾಡುವಾಗ ಅಲಿ ಆ ಮಗುವಿನೊಂದಿಗೆ ಆಟವಾಡುತ್ತಾನೆ. ಕೆಲವೇ ಕ್ಷಣಗಳಲ್ಲಿ ಅವರಿಬ್ಬರ ಮಧ್ಯೆ ಏರ್ಪಡುವ ಸಂಬಂಧ ಸೂಕ್ಷ್ಮ. ಮಲಗಿದ ಆ ಮಗುವನ್ನು ಬಿಟ್ಟು ಹೋಗುವಾಗ ಅವನೊಳಗೆ ಆವರಿಸಿಕೊಳ್ಳುವ ವಿಷಾದವನ್ನೂ ಮುಖದ ಭಾವ ಹೇಳುತ್ತದೆ. ಈ ಮೂಲಕ ನಗರದ ಸಂಬಂಧಗಳ ನೆಲೆಯನ್ನೂ ಅನಾವರಣಗೊಳಿಸುತ್ತಾನೆ.

ಹೀಗೆ ಮನುಷ್ಯ ಸಂಬಂಧಗಳ ನಿರ್ವಹಣೆ ಕುರಿತೇ ಬರೆಯಲು ಬಹಳಷ್ಟಿದೆ. ಇಡೀ ಚಿತ್ರದಲ್ಲಿ ಅಣ್ಣ-ತಂಗಿಯರಿಬ್ಬರನ್ನೇ ಇಟ್ಟುಕೊಂಡು ಒಂದು ಸುಂದರವಾದ ಕಥೆ ಹೆಣೆಯುವ ಮಜಿದ್ ಮಜ್ದಿ ಎಷ್ಟು ಅದ್ಭುತವಾದ ನಿರ್ದೇಶಕ ಎನಿಸಿ ಬಿಡುತ್ತಾನೆ. ಪ್ರತಿ ಚಿತ್ರದಲ್ಲೂ ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನೇ ಹೇಳುತ್ತಾ, ಅದನ್ನು ಹಾಗೆಯೇ ಗಟ್ಟಿಗೊಳಿಸುವ ಬಗೆಗೆ ಕೃತಜ್ಞತೆ ಹೇಳಲೇಬೇಕು. ಇವನ ಮತ್ತೊಂದು ಚಿತ್ರ (ಕಲರ್ ಆಫ್ ಪ್ಯಾರಡೈಸ್)ವೂ ಇಂಥ ನೆಲೆಯದ್ದೇ. ಹಾಗೆಯೇ ಪ್ರತಿ ಸನ್ನಿವೇಶಗಳಲ್ಲೂ ಅದನ್ನೇ “ಫೋಕಸ್’ ಮಾಡುತ್ತಾ, ಎಲ್ಲಿಯೂ ಅದು ಭಾರ ಅಥವಾ ರೇಜಿಗೆ ಹುಟ್ಟದಂತೆ ವಹಿಸುವ ಮುತುವರ್ಜಿಯನ್ನು ಗಮನಿಸಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ ಅಣ್ಣ-ತಂಗಿಯಂಥ ಸೂಕ್ಷ್ಮ ಸಂಬಂಧದ ಪೋಟ್ರೈಟ್ ಇದು. ಸುಪ್ರೀತ್‌ನ ಬರಹ ಓದಿ ನನ್ನ ಭಾವವಲಯ ತೆರೆದುಕೊಂಡಿತು. ಅಲ್ಲಿ ಕಂಡ ಬಿಡಿ ಬಿಡಿ ಚಿತ್ರಗಳನ್ನು ಇಲ್ಲಿ ತೆರೆದಿಟ್ಟೆ, ಅಷ್ಟೇ. ಬಹಳ ದಿನಗಳಿಂದ ಬರೆಯಬೇಕೆಂದಿದ್ದೆ, ಈಗ ಬರೆದಿದ್ದೇನೆ.

ಸಂ-ವಾದ ಆರಂಭ

ಗೆಳೆಯರೇ,
ಪತ್ರಿಕೋದ್ಯಮ ನಮ್ಮ (ಮನುಷ್ಯನ) ಆವಿಷ್ಕಾರಗಳಲ್ಲಿ ಮಹತ್ವದ್ದು. ತನ್ನ ಸುತ್ತಲಿನ ಆಗುಹೋಗುಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿಯೇ ನಮ್ಮ ಚಲನಶೀಲತೆಯನ್ನು ಪ್ರತಿನಿಧಿಸಬಲ್ಲದು. ಅಂಥದೊಂದು ಅಗತ್ಯತೆಯನ್ನು ಕಂಡುಕೊಂಡು ಆ ನೆಲೆಯಲ್ಲಿ ನಾವು ಹತ್ತು ಹಲವಾರು ಸುಧಾರಣೆಗಳನ್ನು ಮಾಡಿಕೊಳ್ಳುತ್ತಾ ಸಾಗಿದ್ದೇವೆ.

ಇಂದು ಮಾಧ್ಯಮ ಹತ್ತಾರು ದೃಷ್ಟಿಕೋನಗಳಲ್ಲಿ ರೂಪುಗೊಳ್ಳುತ್ತಾ ಬೆಳೆಯುತ್ತಿದೆ. ಪರಿಸರದಲ್ಲಾಗುವ ಬದಲಾವಣೆಗಳೆಲ್ಲಾ ಇದರ ಮೇಲೂ ಪರಿಣಾಮ ಬೀರಿದೆ. ಅದನ್ನೆಲ್ಲಾ ನೀಗಿಸಿಕೊಂಡು ಬಹಳ ವಿಸ್ತೃತವಾಗಿ ಮಾಧ್ಯಮ ಬೆಳೆಯುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಮಾಧ್ಯಮ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ-ಸುಧಾರಣೆ ಅತೀವವಾದದ್ದು. ಹತ್ತು ವರ್ಷಗಳ ಹಿಂದಿನ ಸುದ್ದಿಮನೆಯ ಚಿತ್ರಣವೇ ಇಂದು ಬದಲಾಗಿ ಹೋಗಿದೆ.

ತಂತ್ರಜ್ಞರಂತೆಯೇ “ಸ್ಟಿಫ್’ ಆಗಿ ಕಾಣುವ ಸುದ್ದಿಯ ಮನೆಯೊಳಗಿನವರು ಬಹಳ ನಾಜೂಕುತನ ರೂಢಿಸಿಕೊಂಡಿದ್ದಾರೆ. ಕಾರ್‍ಯ ಶೈಲಿಯಲ್ಲೂ ಹೊಸತನ ಬಂದಿದೆ. ಪತ್ರಿಕೋದ್ಯಮ ನಿಂತ ನೀರಾಗದೇ ಹರಿಯುವ ನದಿಯಾಗುವತ್ತ ಸಾಗಿದೆ. ತಂತ್ರಜ್ಞಾನ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ತಂದಿರುವ ಬದಲಾವಣೆಗಳು ಅಪಾರ. ಆದರೆ ಅದು ಮಾಧ್ಯಮ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಆಗಿದೆ. ಮಾಧ್ಯಮ ಬೆಳೆದಿರುವ ರೀತಿಯೂ ಅಗಾಧ. ಭಾರತೀಯ ಪತ್ರಿಕೋದ್ಯಮದಂತೆಯೇ ನಮ್ಮ ಕನ್ನಡ ಪತ್ರಿಕೋದ್ಯಮದಲ್ಲೂ ಒಂದಿಷ್ಟು ಬದಲಾವಣೆಗಳಾಗಿವೆ.

ಉದಾರೀಕರಣ, ಜಾಗತೀಕರಣದ ಗಾಳಿಯಿಂದ ಪಲ್ಲಟದ ಅಲೆಗಳು ಎದ್ದಿರುವುದು ನಿಜ. ಸಹಜವಾಗಿ ನಡೆದುಹೋಗುತ್ತಿದ್ದವ ಇದ್ದಕ್ಕಿದ್ದಂತೆ ಎದುರಾಗುವ ವೃತ್ತದಲ್ಲಿನ ಗೊಂದಲವನ್ನು ನಮ್ಮ ಮಾಧ್ಯಮ ಕ್ಷೇತ್ರವೂ ಎದುರಿಸುತ್ತಿದೆ ; ಪತ್ರಕರ್ತರೂ ಸಹ. ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮದ ನಡುವಿನ ಪೈಪೋಟಿ ಸಹ ಹೆಚ್ಚಿದೆ. ಹಿಂದಿಗಿಂತಲೂ ಈಗ ಪತ್ರಕರ್ತರು ಹೆಚ್ಚು “ಬ್ಯುಸಿ’ಯಾಗಿದ್ದಾರೆ. ಬ್ರೇಕಿಂಗ್ ನ್ಯೂಸ್‌ನತ್ತ ಗಮನ ನೆಟ್ಟಿದ್ದಾರೆ.

ಸೆನ್ಸೇಷನ್ ಜರ್ನಲಿಸಂನಂಥ ಅಪವಾದ ಬರುತ್ತಿರುವುದೂ ನಿಜ. ಸುದ್ದಿಯ ನೆಲೆಯಲ್ಲಿ ಇದ್ದ ವ್ಯತ್ಯಾಸ ದೂರವಾಗುತ್ತಿದೆಯೇನೋ? ಮಾಧ್ಯಮಗಳು ನಮ್ಮ ಬದುಕಿಗೆ ಸಂವಾದವಾಗಿ ಪರಿಣಮಿಸುತ್ತಿಲ್ಲವೇನೋ? ಸುದ್ದಿಯ ವೈಭವೀಕರಣದತ್ತ ಮಾಧ್ಯಮಗಳು ಹೊರಟಿವೆಯೇ? ಇಂಥ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.  ಇದೆಲ್ಲದರ ಮಧ್ಯೆ ಈ “ಸಂವಾದ’ ಆರಂಭಿಸಿದ್ದೇನೆ.

ನನ್ನ ಉದ್ದೇಶ ಯಾವುದೇ ವಿವಾದವನ್ನು ಹುಟ್ಟು ಹಾಕುವುದಲ್ಲ. ನಮ್ಮ ಕ್ಷೇತ್ರದ ಬಹಳಷ್ಟು ಬದಲಾವಣೆಗಳು, ಕ್ಷೇತ್ರದ ಒಳ-ಹೊರಗುಗಳು ಬಹಳಷ್ಟು ಮಂದಿಗೆ ತಿಳಿದೇ ಇರುವುದಿಲ್ಲ. ನಮ್ಮ ಕಾರ್‍ಯ ಕ್ಷೇತ್ರದಲ್ಲಿನ ಒತ್ತಡ, ಡೆಡ್‌ಲೈನ್ ಮುಟ್ಟಲು ಪಡುವ ಶ್ರಮ-ಎಲ್ಲವೂ ಅಪೂರ್ವ. ನಾನು ಈ ಕ್ಷೇತ್ರವನ್ನು ಬಯಸಿಯೇ ಬಂದಿದ್ದು. ನನ್ನ ಅನಿಸಿಕೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ದುಡಿಯುವುದು ನಮಗೆ ಅನಿವಾರ್ಯವೆನಿಸಿದರೆ ಅದು ಜೀತವೆನಿಸದು. ಒಂದು ನಿರ್ದಿಷ್ಟ ನಿಯಮಗಳಡಿ ಸೀಮಿತತೆಯ ವ್ಯಾಪ್ತಿ ಅರಿತು ಕಾರ್‍ಯ ಮಾಡುವುದು ನನ್ನ ದೃಷ್ಟಿ. ಅದರೊಳಗೆ ನನಗೆ ಇಷ್ಟವಾಗುವ ಸೃಷ್ಟಿ ಸಾಧ್ಯವೇ ಎಂದು ಪ್ರಯತ್ನಿಸುತ್ತೇನೆ, ಅಷ್ಟೇ. ನಾನು ಸದಾ ಪ್ರಯತ್ನದಲ್ಲಿ ಮಾತ್ರ ವಿಶ್ವಾಸವಿಡುತ್ತೇನೆಯೇ ಹೊರತು ಪರಿಣಾಮದಲ್ಲಲ್ಲ. ಜಗತ್ತಿನಲ್ಲಿಯೂ ಸಹ. ಇದುವರೆಗೆ ಎಲ್ಲರ ಪ್ರಯತ್ನಗಳಿಗೆ ಬೆಲೆ ಕಟ್ಟಿದ್ದಾರೆಯೇ ಹೊರತು ಪರಿಣಾಮಕ್ಕಲ್ಲ.

ಮೊನ್ನೆ ಹತ್ತು ಉಪಗ್ರಹಗಳನ್ನು ಒಮ್ಮೆಲೆ ಗಗನಕ್ಕೆ ಚಿಮ್ಮಿಸಿದ ಇಸ್ರೋ ಸಾಧನೆ ಆ ಪ್ರಯತ್ನದಲ್ಲಿಯೇ ಹೊರತು ಹತ್ತು ಉಪಗ್ರಹದಲ್ಲಲ್ಲ.  ಈ “ಸಂ-ವಾದ’ ದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಕುತೂಹಲವನ್ನು ಕೇಳಬಹುದು. ಸಾಧ್ಯವಾದಷ್ಟು ಉತ್ತರಿಸಲು ಪ್ರಯತ್ನಿಸುತ್ತೇನೆ. ಅನಗತ್ಯ ವಿವಾದ ಹುಟ್ಟುಹಾಕಬೇಕೆಂದೇ ಸಂಶಯ ಬಂದರೆ ಉತ್ತರಿಸುವುದು ಕಷ್ಟ. ನಿರ್ದಿಷ್ಟ ಸಂಸ್ಥೆ, ವ್ಯಕ್ತಿ ಬಗೆಗಿನ ಕುತೂಹಲಕ್ಕಿಂತಲೂ ಕ್ಷೇತ್ರದ ಬಗೆಗಿನ ವಿಸ್ತೃತ ನೆಲೆಯಲ್ಲಿದ್ದರೆ ಚೆನ್ನ. ಸಂವಾದದ ಆಶಯದಲ್ಲೇ ಇದು ಸಾಗಬೇಕೆಂಬುದು ನನ್ನ ಬಯಕೆ.

ಕೆಲವು ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಇಂಥದೊಂದು ಸಂವಾದ ಸೂಕ್ತ ಎಂದೂ ಹೇಳಿದರು. ಅದೂ ನನ್ನ ಪ್ರಯತ್ನಕ್ಕೆ ಆಶ್ರಯವಾಯಿತು. ಪ್ರಚಲಿತ ವಿದ್ಯಮಾನದಿಂದ ಹಿಡಿದು, ಸುದ್ದಿ ಮನೆಯೊಳಗಿನ ವಿನ್ಯಾಸ, ಕೌತುಕ ಬಗ್ಗೆ ನಾನು ಅಭಿಪ್ರಾಯವನ್ನು ಹಂಚಿಕೊಳ್ಳಬಲ್ಲೆ.

ಪ್ರೀತಿಯಿಂದ
ಚೆಂಡೆಮದ್ದಳೆ

ಸಂ-ವಾದ : ಪ್ರತಿಕ್ರಿಯಿಸಿ

ಗೆಳೆಯರೇ,
‘ಸುಪ್ತದೀಪ್ತಿ’ ಯವರಿಂದ ಪ್ರೇರಿತಗೊಂಡು ನಾನೂ ಹೊಸ ಪ್ರಯತ್ನ ಆರಂಭಿಸೋಣ ಎಂದಿದ್ದೇನೆ. ಒಂದು ಬಗೆಯ ಸಂವಾದವೂ ಹೌದು. ಅದಕ್ಕೇ ‘ಸಂವಾದ’ ವೆಂದೇ ಕರೆಯೋಣ. ಈ ಮೊದಲೇ ತಿಳಿಸಿದಂತೆ ನಾನು ಕಾರ್‍ಯ ನಿರ್ವಹಿಸುತ್ತಿರುವುದು ಪತ್ರಿಕೋದ್ಯಮ ಕ್ಷೇತ್ರದಲ್ಲಿ. ಇಲ್ಲಿನ ಅನುಭವವನ್ನು ಹಂಚಿಕೊಳ್ಳಬೇಕೆಂಬ ಮನಸ್ಸೂ ನನ್ನದು. ಆದ ಕಾರಣ ಈ ಕಾಲಮ್ಮಿನ ಜನನ.

ಮಾಧ್ಯಮ ಕ್ಷೇತ್ರದ ಬೆಳವಣಿಗೆ, ವ್ಯಾಪ್ತಿ, ವಿಸ್ತಾರ, ಕಾರ್‍ಯ ನಿರ್ವಹಣೆಯ ಬಗೆ ಇತ್ಯಾದಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದರೆ ಉತ್ತರಿ ಸಲು ಪ್ರಯತ್ನಿಸುವೆ. ಆದರೆ ಇಂಥದೊಂದು ಕಾಲಮ್ಮು ಅಗತ್ಯವಿದೆಯೇ ? ಅರಂಭಿಸಬಹುದೇ? ದಯವಿಟ್ಟು ಹೇಳಿ. ನಂತರ ನನ್ನ ಮುಂದಡಿ.  ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸಿದ್ದೇನೆ.

ಬ್ರಹ್ಮಚಾರಿಯ ಪುಟಗಳು ಎಂಟು

ಅಂದಿನ ರಾತ್ರಿ ಕಳೆದ ಬಗೆ ಇನ್ನೂ ಚೆನ್ನಾಗಿ ನೆನಪಿದೆ. ಯಾವುದೂ ಮಾಸಿಲ್ಲ. ನಮ್ಮ ವೃತ್ತಿಯ ರೋಚಕ ಅನುಭವ. ನನಗಂತೂ ಸಹಜವಾಗಿಯೇ ವಿದೇಶದಲ್ಲಿ ಬದುಕುವವರ ಜೀವನಶೈಲಿ-ಆಹಾರ-ವಿಹಾರದ ಬಗ್ಗೆ ಕುತೂಹಲವಿತ್ತು. ಅದರಂತೆ ಬಹಳ ಆಸಕ್ತಿಯಿಂದಲೇ ಅವನು ಗಮನಿಸುತ್ತಿದ್ದೆ.

ಅವತ್ತು ರಾತ್ರಿಯೇನೋ ಅವನನ್ನು ಮನೆಗೆ ಕರೆದುತಂದೆವು. ಅವನಿಗೆ ಕೊಡಲು ಏನೂ ಇರಲಿಲ್ಲ. ರಾತ್ರಿ ಹತ್ತರ ಸಮಯ. ಏನು ಅಂತ ತರೋದು. ಅಂಗಡಿಗೆ ಹೋದೆ. ಅವನಿಗೆ ಏನು ರುಚಿಸುತ್ತೆ ಎಂದು ಕೇಳಿದೆವು. ಸುಮ್ಮನೆ ನಕ್ಕ. ತಕ್ಷಣವೇ ನೆನಪಿಗೆ ಬಂದದ್ದು ನೂಡಲ್ಸ್.

ತಮಾಷೆಯೆಂದರೆ ನೂಡಲ್ಸ್ ಮಾಡುವ ಬಗೆ ನನಗೆ ಗೊತ್ತಿರಲಿಲ್ಲ. ಆದರೆ ಶಾವಿಗೆ ಬಾತ್ ತಿಳಿದಿತ್ತು. ಅಂಗಡಿಯಿಂದ ಸಿಗದಾಳನಿಗೆ ಶಾವಿಗೆ ತರಲು ಹೇಳಿದೆ. ಜತೆಗೆ ಕ್ಯಾರೆಟ್, ಬೀನ್ಸನ್ನೂ ತಂದ. ಅವೋ ಒಣಗಿದ್ದವು. ಇದ್ದದ್ದು ಇರಲಿ ಎಂದು ಕತ್ತರಿಸಿ ಅರ್ಧ ಗಂಟೆಯಲ್ಲಿ ಬಾತ್ ಸಿದ್ಧವಾಯಿತು. ಕೊಂಚ ಎಣ್ಣೆ ಕಡಿಮೆ ಹಾಕಿದ್ದೆ. ಚೈನೀಸ್ ಡಿಶ್ ತರವೇ ಬೀನ್ಸ್‌ನ್ನು ಕತ್ತರಿಸಿದ್ದೆ.

ಅವನು ನೂಡಲ್ಸ್ ಮಾದರಿಯಲ್ಲೇ ತಿಂದ. “ಚೆನ್ನಾಗಿದೆ’ ಎಂದೂ ಹೇಳಿದ. ನಮಗೋ ಕರೆದು ತಂದ ತಪ್ಪಿಗೆ ಅವನನ್ನು ಮರುದಿನ ಸಂಜೆವರಗೆ ಸಾಗ ಹಾಕಿದರೆ ಸಾಕು ಎಂದಾಗಿತ್ತು. ಬ್ರೆಡ್ ಪಡೆದು ತಿಂದು, ನೀರು ಕುಡಿದು ಮಲಗಿದ. ಬೆಳಗ್ಗೆ ಆಗುವುದನ್ನೇ ಕಾಯುತ್ತಿದ್ದೆವು. ಸಿಗದಾಳನಿಗೆ ಸೋಮವಾರ ಬೆಳಗ್ಗೆ ತುಸು ಬೇಗ ಆಫೀಸಿಗೆ ಹೋಗಬೇಕಿತ್ತು. ನಾವೂ ಬೇಗ ಎದ್ದು  ಹೋಟೆಲ್‌ನಲ್ಲಿ ತಿಂಡಿ ತಿಂದೆವು. ಹರ್ಷ ಮತ್ತು ನವೀನ್ ಅವನನ್ನು ವಾಪಸು ಮನೆಗೆ ಕರೆ ತಂದು ಉಸ್ತುವಾರಿ ವಹಿಸಿಕೊಂಡರು.

ಮಧ್ಯಾಹ್ನ ಮತ್ತೆ ಶಾವಿಗೆ, ಬ್ರೆಡ್ ಕಥೆ. ಬೇಕೆಂದೇ ನಾನು ಅಂದು ಸ್ವಲ್ಪ ಬೇಗ ಕಮೀಷನರ್ ಕಚೇರಿಯ ಮಾಧ್ಯಮ ಕೇಂದ್ರಕ್ಕೆ ಬಂದೆ. ನನಗೆ ನಮ್ಮ ವಿರೋಧಿ ಗುಂಪಿನ ಇಂಗು ತಿಂದ ಮಂಗನ ಕಥೆ ನೋಡಬೇಕಿತ್ತು. ವಿರೋಧಿ ಗುಂಪಿನ ನಾಯಕ ಬುಸುಗುಡುತ್ತಲೇ ಒಳಗೆ ಬಂದ. ಅವನ ಗುಂಪಿನ ಕೆಲವರನ್ನೇ “ಹೆಂಗ್ ಮಿಸ್ಸಾಯ್ತು, ಆ ಸ್ಟೋರಿ? ನಿಮಗೆ ಗೊತ್ತಾಗಲಿಲ್ವಾ?’ ಎಂದು ಬಡಬಡಿಸತೊಡಗಿದ. ಅವನ ಧ್ವನಿಯಲ್ಲಿ ಅಸಹನೆ ಇತ್ತು.

ಬಹಳ ದಿನಗಳಾದ ಮೇಲೆ ಕೊಟ್ಟ ಚೋಕ್ ಅದು. ಜತೆಗೆ ಆ ಸ್ಟೋರಿ ಅವನ ಗುಂಪಿಗೆ ಮಹತ್ವವಲ್ಲದಿದ್ದರೂ ಅವನಿಗೆ ಅತ್ಯಂತ ಮುಖ್ಯ. ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ಬಂದ ಸ್ಟೋರಿ ನೋಡಿ ಅವರ ಚೀಫ್ ಕೆಂಡಮಂಡಲವಾಗಿದ್ದರು. ಯಾಕೆಂದ್ರೆ ಅವನ ಪತ್ರಿಕೆಯ ಲಂಡನ್ ಎಡಿಷನ್ ಇತ್ತು. ಅದಕ್ಕೆ ಲೀಡ್ ಸ್ಟೋರಿ. ಕ್ರೆಗ್ ಆರ್ಕೆಲ್ ಅಲ್ಲಿಯವನೇ. ಅದೆಲ್ಲವೂ ಅವನ ಧ್ವನಿಯಲ್ಲಿ ಕಾಣುತ್ತಿತ್ತು. ನನ್ನನ್ನು ಕಂಡು ಗುರಾಯಿಸಿ ಹೊರಟ.

ಅವನು ವಿರೋಧಿ ಗುಂಪಿಗೆ ಸಿಗದಂತೆ ನೋಡಿಕೊಂಡೆವು. ನಾನು ಮಧ್ಯಾಹ್ನ ಆದದ್ದನ್ನೆಲ್ಲಾ ಕಚೇರಿಗೆ ಹೋಗಿ ಹರ್ಷ, ನವೀನ್‌ರಿಗೆ ವರದಿ ಕೊಟ್ಟೆ. ಸಂಜೆಯಷ್ಟೊತ್ತಿಗೆ ಅವನನ್ನು ಇಂಡಿಯನ್ ಎಕ್ಸ್‌ಪ್ರೆಸ್ ಆಫೀಸಿಗೆ ಹರ್ಷ ಕರೆದು ತಂದ. ಸಂತೋಷದ ಸಂಗತಿಯೊಂದಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ಆಫೀಸ್‌ಗೆ ಫೋನ್ ಮಾಡಿದ ಸಾರ್ವಜನಿಕರೊಬ್ಬರು ಅವನ ಪ್ರಯಾಣಕ್ಕೆ5 ಸಾವಿರ ರೂ. ಕೊಡುವುದಾಗಿ ಘೋಷಿಸಿದ್ದರು. ಹೀಗೆ ನಮ್ಮ ಆಫೀಸ್‌ಗಳಿಗೂ ಕೆಲವು ಕರೆಗಳು ಬಂದಿದ್ದವು. ಅಂತಿಮವಾಗಿ ಅವನಿಗೆ ಸುಮಾರು 10 ಸಾವಿರ ರೂ. ಗಳು ಹೊಂದಿಕೆಯಾದಂತೆ ನೆನಪು.

ಸಂಜೆ ಬಾಂಬೆಗೆ ಹೋಗುವ ಉದ್ಯಾನ ಎಕ್ಸ್‌ಪ್ರೆಸ್‌ನಲ್ಲಿ ಅವನನ್ನು ಕೂರಿಸಿ, ಪಕ್ಕದ್ದಲ್ಲಿದ್ದವರಿಗೆ ಪರಿಚಯ ಮಾಡಿಸಿದೆ. ಕೆಲ ಕ್ಷಣಗಳಲ್ಲಿ ರೈಲು ಹೊರಟಾಗ ಅವನು ನನ್ನೆಡೆ ಅಭಿಮಾನದಿಂದ ಕೈ ಬೀಸಿದ. ಯಾವುದೋ ಸಂಬಂಧ ನಮ್ಮನ್ನು ಬೆಸೆದಿತ್ತು.

ಕೊನೆಗೂ ಸ್ವಲ್ಪ ದಿನಗಳ ನಂತರ ಅವನ ಊರಿನಿಂದ ನಮಗೆ ಕಾಗದ ಬಂತು. ಅವನು ಆರಾಮಾಗಿ ತಲುಪಿದ ಬಗೆಯನ್ನು ವಿವರಿಸಿ, ನಮ್ಮೆಲ್ಲರ ನೆರವನ್ನು ಕೊಂಡಾಡಿದ್ದ. ನಮಗೆ ಕೃತಾರ್ಥ ಭಾವನೆ ಮೂಡಿತ್ತು. ನಮ್ಮ ಸ್ಟೋರಿಗಾಗಿ ಸ್ವಾರ್ಥದಿಂದ ವರ್ತಿಸಿದೆವೇನೋ ಎನಿಸಿದರೂ, ಜತೆಗೆ ಮಾನವೀಯತೆಯಿಂದ ನಡೆದುಕೊಂಡೆವು ಎಂಬ ಸಮರ್ಥನೆ ಇತ್ತು. ನಿಮಗೆ ಏನನ್ನಿಸುತ್ತದೋ ಗೊತ್ತಿಲ್ಲ.

ಅವನ ಪತ್ರದ ಒಕ್ಕಣಿಕೆ ಹೀಗಿತ್ತು. ಮಿ. ಹ್ಯಾಪಿ, ಮಿ. ಲೋಟಸ್ 1, ಲೋಟಸ್ 2, ಮಿ. ನ್ಯೂ… ನಮ್ಮ ಭಾರತೀಯ ಹೆಸರುಗಳು ಅವನಿಗೆ ಉಚ್ಚರಿಸಲು ಬರುತ್ತಿರಲಿಲ್ಲ. ಹಾಗಾಗಿ ನಮ್ಮ ಹೆಸರಿನ ಅರ್ಥ ಅವನ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದೆವು. ಹಾಗಾಗಿ ಹರ್ಷ ಎಂಬವ ಮಿ. ಹ್ಯಾಪಿ ಆಗಿದ್ದ, ನವೀನ್ ಮಿ. ನ್ಯೂ, ಅರವಿಂದ ಸಿಗದಾಳ ಮಿ. ಲೋಟಸ್ 1 ಹಾಗೂ ಅರವಿಂದ ಮಿ. ಲೋಟಸ್ 2…!

ಎಲೆಕ್ಷನ್ ಗಲಾಟೆ ಧಾರಾವಾಹಿಯ ಮುಂದಿನ ಕಂತು ಬರೆಯಲು ತಡವಾಯಿತು. ಕ್ಷಮಿಸಿ. (ಸಶೇಷ)

ಬಿಕ್ಕಿದ ಸಾಲುಗಳು-ಮತ್ತೊಂದು ಕಂತು

ಆಗಸದಲ್ಲಿ ಚಂದಿರ
ಬಂದಿದ್ದಾನೆ
ಅಂಗಳದಲ್ಲಿ ಮಲ್ಲಿಗೆ
ಅರಳಿದೆ
ಅವಳ ಕಾಯುವಿಕೆಯಲ್ಲಿ
ಕಣ್ಣುಗಳು
ಸೋತಿವೆ
ಇನ್ನು ಕಣ್ಣು ಮುಚ್ಚುತ್ತೇನೆ
ಕನಸಿನಲ್ಲಾದರೂ
ಆಕೆಯ ಹೆಜ್ಜೆ ತೋರಬಹುದು !
***
ಬೆಳಕು
ಪಡೆದವರೆಲ್ಲಾ
ಮೋಹಿಗಳಾದರು
ಅದ ನೀಡಿದವ ಮಾತ್ರ
ನಿರ್ಮೋಹಿಯಾಗಿಯೇ
ಉಳಿದ
***
ಗುಲಾಬಿ ತೋಟದ
ಹುಡುಗಿ
ಮುಳ್ಳನ್ನೇ
ಹೊದ್ದು ಬಂದಳು
ಅವಳಿಗಾಗಿ
ಆತ
ಮುಳ್ಳನ್ನೇ ಪ್ರೀತಿಸಿದ !
***
ನನ್ನ
ಬೊಗಸೆ ತುಂಬಾ
ನಿರೀಕ್ಷೆಗಳ
ಮೊಗ್ಗುಗಳಿವೆ
ಪರಿಮಳಿಸಲು
ಅವಳ ಒದ್ದೆ ಕಣ್ಣುಗಳ
ಪ್ರೀತಿ ಬೇಕು
***
ಹೆಜ್ಜೆಯ
ಜಾಡು
ಅರಿಯುವ ಹಂಬಲ
ಮೀನ ಪಾದಕ್ಕೂ
ಗೆಜ್ಜೆ ಕಟ್ಟುತ್ತೇನೆ
***
ಸೊಗಸಿಗೆ
ಉದಾಹರಣೆಯಾಗಿ
ನಿಂತವಳ
ಕಣ್ತುಂಬಿಕೊಳ್ಳುವೆ
ಮತ್ತೇನನ್ನೂ
ನೋಡುವುದಿಲ್ಲ !

ಪ್ರಜಾತಂತ್ರದ ದೊಡ್ದ ತಮಾಷೆ !

ಪ್ರಜಾತಂತ್ರದ ತಮಾಷೆ ನೋಡುತ್ತಿದ್ದೀರಿ. ಅನುಕೂಲಸಿಂಧು ರಾಜಕಾರಣದ ಪರಾಕಾಷ್ಠೆಯೂ ಹೌದು. ಪ್ರತಿ ಪಕ್ಷಗಳಿಗೂ ಗೆಲ್ಲುವ ಅಭ್ಯರ್ಥಿಗಳೇ ಬೇಕು. ಅಂದರೆ ಗೆಲ್ಲುವ ಕುದುರೆಯ ಬಾಲಕ್ಕೆ ಹಣ ಕಟ್ಟುವವರೇ ಆಗಿದ್ದಾರೆ. ಇಷ್ಟೇ ಆಗಿದ್ದರೆ ತಮಾಷೆಯಲ್ಲ. ಜಾತ್ಯತೀತತೆ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವವರೆಲ್ಲಾ ಜಾತಿ, ಒಳಜಾತಿಯನ್ನು ಹುಡುಕಿಕೊಂಡು ಆ-ಈ ಜನಾಂಗಗಳ ಪಟ್ಟಿ ಹಿಡಿದುಕೊಂಡು ಟಿಕೆಟ್ ಹಂಚುತ್ತಿದ್ದಾರೆ.

ಈ ಮಾತು ಆ ಪಕ್ಷ-ಈ ಪಕ್ಷಕ್ಕೆ ಅನ್ವಯಿಸುವುದಿಲ್ಲ . ಎಲ್ಲವುಗಳ ಕಥೆಯೂ ಅದೇ. ಹೀಗೆ ಆಯ್ಕೆಯಾಗಿ ಸೀಟು ಪಡೆದು ಗೆದ್ದ ನಮ್ಮ ಜನ ಪ್ರತಿನಿಧಿಗಳಲ್ಲಿ ‘ಎಲ್ಲರನ್ನೂ ಸಮಾನವಾಗಿ ಕಾಣಿರಿ’ ಎಂದು ಬೇಡಿಕೊಳ್ಳುವ ಸ್ಥಿತಿ ಎಲ್ಲರದ್ದು. ಜತೆಗೆ ಜಾತಿ ಕಾರಣದಿಂದಲೇ ಸೀಟು ಪಡೆದವರಿಗೆ ಎಲ್ಲ ಜಾತಿಯವರೂ ಓಟು ಹಾಕಿ ಗೆಲ್ಲಿಸಬೇಕು. ಇದೆಂಥಾ ವಿಪರ್ಯಾಸವಲ್ಲವೇ?

ಮೂರು ದಿನಗಳಿಂದ ಎಲ್ಲೆಲ್ಲೂ ಬಂಡಾಯದ ಮಾತು ಕೇಳಿ ಬರುತ್ತಿದೆ. ಎಲ್ಲರಿಗೂ ನಾಯಕರಾಗಬೇಕೆಂಬ ತುಡಿತ-ಹಂಬಲದ ತೀವ್ರತೆ ಎಷ್ಟಿದೆಯೆಂದರೆ ಎಲ್ಲರ ಬೆಂಬಲಿಗರು ಇಂಥ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದು ಕಥೆ ನೆನಪಾಗುತ್ತದೆ. ಒಂದೂರಿನಲ್ಲಿ ಆರು ಮಂದಿ ರುಡಾಲಿಗಳಿದ್ದರಂತೆ. ಅಂದರೆ ಯಾರಾದರೂ ಸತ್ತಾಗ ಬಾಡಿಗೆಗೆ ಅಳುವವರು. ಸತ್ತವರ ಮನೆ ಮುಂದೆ ಅಂಥದೊಂದು ದುಃಖದ ವಾತಾವರಣ ನಿರ್ಮಿಸುವುದು ಅವರ ಕೆಲಸ. ವಾಸ್ತವವಾಗಿ ವೃತ್ತಿಪರ ರೋದಕರು ಅವರು.

ಊರಿನಲ್ಲಿ ಯಾರೇ ಸತ್ತರೂ ಅವರೇ ಹೋಗಬೇಕು. ಆ ಊರಿನಲ್ಲಿ ಬೇರೆ ರುಡಾಲಿಗಳಿಲ್ಲ. ಪಕ್ಕದೂರಿನಲ್ಲಿ ಹೀಗೇ ಒಬ್ಬ ಶ್ರೀಮಂತ ಒಮ್ಮೆ ಸತ್ತ. ಆ ಊರಿನಲ್ಲಿ ರುಡಾಲಿಗಳಿರಲಿಲ್ಲ. ಈ ಊರಿನಿಂದ ಬಾಡಿಗೆಗೆ ಕರೆ ತರಬೇಕು. ಆದರೆ ಈ ಊರಿನ ರುಡಾಲಿಗಳಿಗೆ ಒಂದೇ ಚಿಂತೆ. ಒಂದುವೇಳೆ ಈ ಊರಿನಲ್ಲಿ ಯಾರಾದರೂ ಆಕಸ್ಮತ್ತಾಗಿ ಸತ್ತರೆ ಯಾರು ಅಳುತ್ತಾರೆ? ಅದೂ ನಿಜವೇ.

ಹೇಗೂ ಕಷ್ಟಪಟ್ಟು ಆ ಊರಿಗೆ ಹೋಗಿ ಶ್ರೀಮಂತನ ಮನೆ ಮುಂದೆ ಅಳುತ್ತಿದ್ದರಂತೆ. ಆಗ ಸುದ್ದಿ ಬಂತು. ತಮ್ಮ ಊರಿನಲ್ಲಿ ಯಾರೋ ಒಬ್ಬರು ಸತ್ತಿದ್ದಾರೆ ಎಂದು ತಿಳಿಯಿತು. ಆದರೆ ಹೊರಡುವಂತಿಲ್ಲ. ಇಲ್ಲಿ ಹಣ ಪಡೆದ ಋಣ ಅವರನ್ನು ಕಾಡುತ್ತಿತ್ತು. ಆಗ ಏನು ಮಾಡುವುದು ತಿಳಿಯದೇ ಮನೆಯವರಿಗೆ ಹೋಗಿ ಹೇಳಿದರಂತೆ- ‘ನಮ್ಮ ಪರಿಸ್ಥಿತಿ ಹೀಗಿದೆ. ಏನಾದರೂ ಉಪಾಯ ಹೇಳುತ್ತೀರಾ?’ ಎಂದು ಕೇಳಿದ್ದಕ್ಕೆ ‘ಅದ್ಹೇಗೆ ಸಾಧ್ಯ ?’ ಎಂದರಂತೆ ಮನೆಯವರು. ಅತ್ತ ಹೋಗಲೂ ಆಗಲಿಲ್ಲ. ಅಂದಿನಿಂದ ಬೇರೆ ಊರಿಗೆ ಹೋಗಿ ಅಳುವುದನ್ನೇ ರುಡಾಲಿಗಳು ನಿಲ್ಲಿಸಿದರಂತೆ.

ಇಂಥ ಕನಿಷ್ಠ ನಿಯತ್ತು ನಮ್ಮ ನಾಯಕರ ಬೆಂಬಲಿಗರಿಗಿಲ್ಲ, ಬಿಡಿ. ಇದು ಗಂಭೀರವಾದ ಲೇಖನ ಎಂದುಕೊಳ್ಳಬೇಡಿ. ಮೂರ್‍ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯನ್ನು ಕಂಡಾಗ ಅನಿಸಿದ್ದು. ಇಲ್ಲಿ ಈ ನಾಯಕರ ಪರವಾಗಿ ಪ್ರತಿಭಟಿಸಿದವರೇ ನಾಳೆ ನಡೆಯುವ ಅವರ ವಿರೋಧಿ ಪ್ರತಿಭಟನೆಯಲ್ಲೂ ಇರುತ್ತಾರೆ. ಅದರಲ್ಲೇನೂ ಅಚ್ಚರಿಯಿಲ್ಲ.

ನಮ್ಮ ನಾಯಕರೂ ಹಾಗೆಯೇ. ಬೆಳಗ್ಗೆ ಕಾಂಗ್ರೆಸ್ ಬಾಗಿಲಲ್ಲಿ ನಿಂತವರು, ಮಧ್ಯಾಹ್ನ ಬಿಜೆಪಿಯ ಪಡಸಾಲೆಯಲ್ಲಿರುತ್ತಾರೆ. ಸಂಜೆ ಎನ್ನುವಷ್ಟರ ಮಟ್ಟಿಗೆ ಜೆಡಿಎಸ್‌ನ ಉಪ್ಪರಿಗೆಯಲ್ಲಿ ಇರುತ್ತಾರೆ. ದುರಂತವೆಂದರೆ ಎಲ್ಲೆಲ್ಲೂ ಕಾಯುವುದೇ ನಮ್ಮವರ ಸರದಿ. ‘ಅಪಾಯಿಂಟ್‌ಮೆಂಟ್’ಗೆ ಕಾದುಕೊಂಡು ರಾಜಕೀಯ ಮಾಡಬೇಕು. ಸದಾ ಬೆಂಕಿಯಿಂದ ಬಾಣಲೆಗೆ ಬೀಳುತ್ತಾ, ಬಾಣಲೆಯಿಂದ ಬೆಂಕಿಗೆ ಬೀಳುತ್ತಾ ನಮ್ಮನ್ನು ಆಳುವಂಥ ಕಷ್ಟವನ್ನು ನಿಭಾಯಿಸಬೇಕು. ಅಯ್ಯೋ ಪಾಪ ಎನಿಸುವುದಿಲ್ಲವೇ? ನಮ್ಮ ಆಳುವವರ ಕಂಡು.

ಯಾರು ಹಿತವರು ಈ ಮೂವರೊಳಗೆ ಎಂದರು ಪುರಂದರದಾಸರು. ನಮ್ಮ ಹಿತ ಕಾಯುವವರು ಯಾರೂ ಇಲ್ಲವೆನ್ನಿ. ಜತೆಗೆ ಹಿತವಾಗುವವರೂ ಇಲ್ಲ.  ಇನ್ನೂ ಬೇಸರದ ಸಂಗತಿಯೆಂದರೆ ನಮ್ಮ ನಾಯಕರಿಗೆ ತಮ್ಮ ಹಿತವನ್ನೂ ಸ್ವಾಭಿಮಾನಿಯಾಗಿ, ಸಾತ್ವಿಕ ನೆಲೆಯಲ್ಲಿ ಕಾದುಕೊಳ್ಳಲು ಬರುವುದಿಲ್ಲ. ಅದಕ್ಕೆ ರಸ್ತೆ ತಡೆ ನಡೆಸಬೇಕು, ಟೈರ್‌ಗಳನ್ನು ಸುಡಬೇಕು. ಸಿಕ್ಕವರ ವಿರುದ್ಧ ಗಲಾಟೆ ನಡೆಸಿ ‘ಹೋ…ಹೋ…’ ಎನ್ನಬೇಕು.

ದೊಡ್ಡ ಚುನಾವಣೆ ನಡೆಯುವ ಮುನ್ನ ಘಟಿಸುವ ಟಿಕೆಟ್ ಮ್ಯಾರಥಾನ್ ನೋಡಿದರೆ ಅಯ್ಯೋ ಎನಿಸುತ್ತದೆ. ಒಬ್ಬರು ಟಿಕೆಟ್ ಸಿಗಲಿಲ್ಲ ಎಂದು ಅಳುತ್ತಾರೆ. ಮತ್ತೊಬ್ಬರು ತಮ್ಮ ಬೆಂಬಲಿಗರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಹುರಿದುಂಬಿಸುತ್ತಾರೆ. ಮಗದೊಬ್ಬರು ಈ ಎಲ್ಲ ತಂತ್ರಗಳನ್ನು ಬಿಟ್ಟು ಮತ್ತೇನನ್ನೋ ಹುನ್ನಾರ ನಡೆಸುತ್ತಾರೆ. ಸ್ವಲ್ಪ  ಜಾತಿ ಬಲವಿದ್ದರೆ, ಹಣದ ಬಲವೂ ಇದ್ದರೆ ಬೇರೆ ಪಕ್ಷಗಳು ಗಾಳಕ್ಕೆ ಸಿಲುಕುತ್ತಾರೆ. ಇಲ್ಲದಿದ್ದರೆ ಅತೃಪ್ತ ಪ್ರೇತಾತ್ಮಗಳಂತೆ ಅಲ್ಲಿಯೂ ಇಲ್ಲಿಯೂ ಅಲೆದಾಡಬೇಕು.

ಅರವತ್ತು ವಯಸ್ಸಿನವರ ರಾಜಕಾರಣಕ್ಕೆ ಕೊನೆ ಹೇಳಬೇಕೆನ್ನುವುದು ನಿಜ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನವೂ ನಡೆಯುತ್ತಿಲ್ಲ. ಮತ್ತೆ ಎಲ್ಲ ಪಕ್ಷಗಳಲ್ಲೂ ಐವತ್ತರ ನಂತರದವರೇ ಮಂತ್ರಿಯಾಗಬೇಕು, ಮುಖ್ಯಮಂತ್ರಿಯಾಗಬೇಕು ಎಂದು ಹಪಹಪಿಸುತ್ತಿದ್ದಾರೆ. ಹಾಗಾದರೆ ಯುವಜನರು ರಾಜಕೀಯ ಮಾಡೋದು ಹೇಗೆ ಎಂದು ಹಿರಿಯ ರಾಜಕಾರಣಿಯೊಬ್ಬರನ್ನು ಕೇಳಿದರೆ ಅತ್ಯಂತ ಉಲ್ಲಸಿತರಾಗಿ ‘ನಮ್ಮನ್ನು ನೋಡಿಕೊಂಡು ಕಲಿತುಕೊಳ್ಳಿ’ ಎನ್ನುತ್ತಾರೆ. ಇವರಿಂದ ಏನನ್ನು ಕಲಿಯಬೇಕೆಂದು ಮಾತ್ರ ಹೇಳುವುದಿಲ್ಲ.

ಇನ್ನೊಂದು ತಿಂಗಳ ಇಂಥದೊಂದು ಚುನಾವಣೆಯ ತಮಾಷೆ ನಡೆಯುತ್ತದೆ. ಈ ಮಾತನ್ನು ಅತ್ಯಂತ ಲಘುವಾಗಿ ಹೇಳುತ್ತಿಲ್ಲ. ಆದರೆ ಪ್ರತಿದಿನ ನಡೆಯುವ ರಾಜಕಾರಣ ಒಂದು ನಾಟಕಕ್ಕಿಂತ ಹೆಚ್ಚಿನದಾಗಿ ಏನೂ ಅನಿಸುವುದಿಲ್ಲ. ಸಿದ್ದರಾಮಯ್ಯನವರು ಜೆಡಿಎಸ್‌ನಲ್ಲಿ ಬೇಸರಗೊಂಡು ಕಾಂಗ್ರೆಸ್‌ಗೆ ಹೋದರು. ಹೋಗುವಾಗ ಬರಿಗೈಲಿ  ಹೋಗಲಿಲ್ಲ. ಪಟಾಲಾಂನೊಂದಿಗೆ ಹೋದರು. ಅವರಿಗೆಲ್ಲಾ ಟಿಕೆಟ್ ಕೊಡಿಸಲು ದಿಲ್ಲಿಯಲ್ಲಿ ಕಸರತ್ತು ನಡೆಸಿದ್ದೇ ನಡೆಸಿದ್ದು. ಪುಣ್ಯಕ್ಕೆ ಜಾತಿ ಬಲವಿತ್ತು. ಹೇಳಿದವರಿಗೆಲ್ಲಾ ಟಿಕೆಟ್ ಸಿಗಲಿಲ್ಲವೆಂದರೂ ಶೆ. ೯೦ ರಷ್ಟು ಟಿಕ್ ಮಾಡಿದವರಿಗೆ ಟಿಕೇಟು ಸಿಕ್ಕಿತು. ಹಾಗೆಂದು ಜೆಡಿಎಸ್ ನಲ್ಲಿ ತಮಗೆ ಕೇಳಿದಲ್ಲಿ ಟಿಕೆಟ್ ಸಿಗಲಿಲ್ಲವೆಂದು ಬೇಸತ್ತವರು ಬಿಜೆಪಿಗೆ ಸೇರಲು ಹೊರಟಿದ್ದಾರೆ. ಒಟ್ಟಿನಲ್ಲಿ ತಾವು ಭದ್ರ ಎಂದು ತಿಳಿದುಕೊಂಡಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್ ಬೇಕು. ಪಕ್ಷವಾಗಲೀ, ನಿಷ್ಠೆಯಾಗಲೀ ಬೇಕಿಲ್ಲ. ಹಾಗೆಂದು ನೀವು ಕೇಳಿದರೆ ‘ಮಸ್ಕಿರಿ’ ಮಾಡ್ತಿರೇನು? ಎಂದು ಪ್ರಶ್ನಿಸಿ ಕಳಿಸಿಯಾರು. ಹೀಗೆ ಗಂಟೆಗೊಂದು ಪಕ್ಷ ಬದಲಿಸುವವರಿಗೆ ಮತ ಹಾಕಬೇಕೇನು ? ಎಂದೆನಿಸುವುದು ಸಹಜ.

ಆದರೆ ಪ್ರಜಾತಂತ್ರದಲ್ಲಿ ಪಾಲ್ಗೊಳ್ಳಬೇಕಾದ ಹೊಣೆ ಹೊತ್ತಿರುವ ನಾವೆಲ್ಲಾ ಯಾರಿಗಾದರೂ ಒಬ್ಬರಿಗೆ ಮತ ಹಾಕಬೇಕು. ಅಂದರೆ ಎಲ್ಲರೂ ಕಳ್ಳರು, ಸುಳ್ಳರೇ. ಅವರಲ್ಲಿ ಪ್ರಮಾಣ ಆಧರಿಸಿ ಆಯ್ಕೆ ಮಾಡಬೇಕು. ದೊಡ್ಡ ಕಳ್ಳನಿಗಿಂತ ಸಣ್ಣ ಕಳ್ಳ ಪರವಾಗಿಲ್ಲ. ಅದೂ ಅವನು ದೊಡ್ಡ ಕಳ್ಳನಾಗುವವರೆಗೆ. ಇದರರ್ಥ ಎಲ್ಲ ಜನಪ್ರತಿನಿಧಿಗಳನ್ನು ಒಂದೇ ತಕ್ಕಡಿಯಲ್ಲಿ ಇಡುತ್ತಿಲ್ಲ. ಅವರೇ ಕುಳಿತುಕೊಳ್ಳುತ್ತಿದ್ದಾರೆ. ಇಂಥದೊಂದು ತಮಾಷೆಗೆ ಸಾಕ್ಷಿಯಾಗುವ ಮುನ್ನ ಕೊಂಚ ಆಲೋಚಿಸುವುದೊಳಿತಲ್ಲವೇ? 

ಗರಿಮುರಿ ಈರುಳ್ಳಿ ಪಕೋಡ

ಹೋಟೆಲ್‌ನಲ್ಲಿ ಇರೋ ಈರುಳ್ಳಿ ಪಕೋಡಕ್ಕೆ ಏಕೆ ಅಷ್ಟೊಂದು ರುಚಿ ? - ಈ ಪ್ರಶ್ನೆಯನ್ನು ಹಲವರಿಂದ ಕೇಳಿದ್ದೇನೆ. ನನ್ನ ಮನೆಗೆ ಬರುವ ಅತಿಥಿಗಳಿಂದಲೂ ಸಹ. ಸುಮ್ಮನೆ ಇದನ್ನು ಯೋಚಿಸ್ತಿದ್ದಾಗ ಗರಂ ಗರಿಮುರಿ ಪಕೋಡ ಮಾಡೋಣ ಅನ್ನಿಸ್ತು. ಅದಕ್ಕೇ ಈ ರೆಸಿಪಿ ಹಾಕ್ತೀದ್ದೀನಿ. ಮಾಡಿದ್ಮೇಲೆ ಪ್ರತಿಕ್ರಿಯಿಸಿ.

ಈರುಳ್ಳಿ ಪಕೋಡಕ್ಕೆ ಬಳಸುವ ಸಾಮಾನು : ಈರುಳ್ಳಿ, ಕರಿಬೇವಿನಸೊಪ್ಪು, ಹಸಿಮೆಣಸು, ಹತ್ತು ಕಾಲು ಕೊತ್ತಂಬರಿ ಬೀಜ, ಕಡಲೆಹಿಟ್ಟು, ಸ್ವಲ್ಪ ಎಣ್ಣೆ, ಕರಿಯಲು ಅಗತ್ಯವಿರುವ ಎಣ್ಣೆ, ಉಪ್ಪು ಹಾಕಬೇಕಾದದ್ದು ಗೊತ್ತೇ ಇದೆಯಲ್ಲ.

ಮನೆಯಲ್ಲಿ ಮೂವರಿದ್ದರೆ ದೊಡ್ಡ ಗಾತ್ರದ ನಾಲ್ಕೈದು ಈರುಳ್ಳಿಗಳು ಸಾಕು. ಅದನ್ನು ಎರಡು ಭಾಗ ಮಾಡಿಕೊಂಡು, ಉದ್ದುದ್ದ ಕತ್ತರಿಸಬೇಕು. ಅದು ತೆಳ್ಳಗಿದ್ದಷ್ಟೂ ಪಕೋಡ ಚೆನ್ನಾಗಿ ಬರುತ್ತದೆ. ಕೂದಲಿನಷ್ಟು ತೆಳ್ಳಗಿದ್ದರೆ ಪಕೋಡದ ನಾಜೂಕುತನ ಅರಿವಾಗಬಹುದು. ಹಸಿಮೆಣಸೂ ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಚಿಕ್ಕದಾದಷ್ಟೂ ತಿನ್ನುವಾಗ ಖಾರದ ಕಿರಿಕಿರಿಯಾಗದು.  ಹುಷಾರ್, ಕೈ ಕೊಯ್ಯಿಕೊಂಡಿದ್ದೀರಿ !

ಹಾಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸನ್ನು ಹಿಟ್ಟು ಕಲೆಸುವ ಪಾತ್ರಕ್ಕೆ ಸುರಿದುಕೊಂಡು, ಕಾಯಲು ಒಲೆಯ ಮೇಲಿಟ್ಟ ಎಣ್ಣೆಯನ್ನು ಸ್ವಲ್ಪ ಎಂದರೆ ಐದಾರು ಚಮಚ ಹಾಕಿಕೊಂಡು ನಾದಬೇಕು. ಬರೀ ಈರುಳ್ಳಿಯನ್ನು ನಾದಿದಾಗ ಅದರೊಳಗಿನ ವಲಯವೆಲ್ಲಾ ಬಿಟ್ಟುಕೊಂಡು ಈರುಳ್ಳಿಯ ಪ್ರತಿ ಬಿಲ್ಲೆಗಳೂ ನೂಲಿನ ಎಳೆಯಂತೆ ಬೇರೆ ಬೇರೆಯಾಗುತ್ತವೆ. ಆಗ ಕೊತ್ತಂಬರಿ ಕಾಳನ್ನು ಕೈಯಲ್ಲೇ ಚೆನ್ನಾಗಿ ತಿಕ್ಕಿ ಹಾಕಿಕೊಳ್ಳಿ. ಉಪ್ಪು ಮಿಶ್ರಣ ಮಾಡಿಕೊಳ್ಳಿ. ನಂತರ ಸಣ್ಣ ಸಣ್ಣ ಗುಂಪನ್ನು ಮಾಡಿಕೊಳ್ಳಿ ಅಥವಾ ಒಂದು ಭಾಗವನ್ನು ಪ್ರತ್ಯೇಕವಾಗಿರಿಸಿಕೊಳ್ಳಿ.

ಎಣ್ಣೆ ಕಾವು ಬಂದಿದೆಯೇ ನೋಡಿಕೊಂಡು (ತೀರಾ ಹೆಚ್ಚಿನ ಕಾವಿದ್ದರೆ ಕಷ್ಟ) ಪ್ರತ್ಯೇಕವಾಗಿರಿಸಿಕೊಂಡ ಭಾಗದ ಮೇಲೆ ಕಡಲೆಹಿಟ್ಟನ್ನು ಸಿಂಪಡಿಸುವಂತೆ ಹಾಕಬೇಕು. ಐದು ಈರುಳ್ಳಿಗಳ ಪಕೋಡಕ್ಕೆ ಸುಮಾರು ೧೫೦ ರಿಂದ ೧೭೫ ಗ್ರಾಂ ಕಡಲೆ ಹಿಟ್ಟು ಸಾಕು. ಒಮ್ಮೆಲೆ ಸುರಿದು ಕಲೆಸಲು ಹೋಗಬಾರದು. ಜತೆಗೆ ಹಿಟ್ಟು ಹಾಕಿದ ಮೇಲೆ ನಾದಲೂ ಹೋಗಬಾರದು. ಹಿಟ್ಟು ಸಿಂಪಡಿಸಿ ಮೆಲ್ಲಗೆ ನಾಜೂಕಿನಿಂದ ಎಣ್ಣೆಗೆ ಬಿಡುತ್ತಾ ಬರಬೇಕು. ಉಳಿದ ಈರುಳ್ಳಿಗೂ ಹಾಗೆಯೇ ಮಾಡಬೇಕು. ಕೆಂಪನೆಯ ಬಣ್ಣಕ್ಕೆ ಬಂದ ಮೇಲೆ ತೆಗೆಯಬಹುದು. ಕೊನೆಗೆ ಬರೀ ಕರಿಬೇವುಗಳನ್ನು ಕರೆದು ಅದರ ಮೇಲೆ ಅಲಂಕರಿಸಿದರೆ ಈರುಳ್ಳಿ ಪಕೋಡ ರೆಡಿ.
ಇದು ಸಲ್ಲದು :
ಸಾಮಾನ್ಯವಾಗಿ ಎಲ್ಲರೂ ಮಾಡುವುದೆಂದರೆ ಈರುಳ್ಳಿಯೊಂದಿಗೆ ಕಡಲೆಹಿಟ್ಟು ಎಲ್ಲದರಂತೆ ಕಲೆಸಿಬಿಡುತ್ತಾರೆ. ಇನ್ನು ಕೆಲವರು ಅದಕ್ಕೆ ನೀರು ಬೆರೆಸಿ ಕಲೆಸುತ್ತಾರೆ. ಅದೂ ಸಲ್ಲದು. ಇದರಿಂದ ಪಕೋಡ ಗಟ್ಟಿಯಾಗುತ್ತದೆ. ಗರಿಮುರಿ ಬರದು.

Next Page »